Google Search

Custom Search
Showing posts with label ಕನ್ನಡ. Show all posts
Showing posts with label ಕನ್ನಡ. Show all posts

Sunday, July 21, 2013

ಕ್ಷಣ-ಕ್ಷಣ...

ಹೇಳಬೇಕೆನಿಸಿದೆ ಗೆಳತಿ ಸವಿಯಾದ ಮಾತೊಂದ,
ಕೇಳಲೊಂದು ಕ್ಷಣ ಕಿವಿಗೊಡುವೆಯಾ ನೀನು???
ಕಪ್ಪು-ಬಿಳುಪಿನ ಕನಸಿನಲಿ ಬಣ್ಣಗಳ ಹೋಳಿಯಾಟ,
ಬಣ್ಣಗಳ ಬದುಕಿನಲಿ ಕತ್ತಲೆಯ ಕ್ರೂರ ನೋಟ...

ಕೇಳಬೇಕೆನಿಸಿದೆ ಗೆಳತಿ ನಿನ್ನ ಮನಸಿನ ಮಾತೊಂದ,
ಬಳಿಬರುವೆ ಬಳಿಗೆ ಸೆಳೆವೆ, ಪ್ರೀತಿಸಲು ನೀನು....
ಗುಡುಗು ಸಿಡಿಲುಗಳೆ ತುಂಬಿವೆ ನಿನ್ನ ಮನದಾಳದಲೆಲ್ಲ,
ಮಿಂಚಂತೆ ಮರೆಯಾದೆ ಕಣ್ಣೋಟದಿಂದ....

ನೋಡಬೇಕೆನಿಸಿದೆ ಗೆಳತಿ ನಿನ್ನನೊಂದು ಕ್ಷಣ,
ಇನ್ನೆಷ್ಟು ದಿನ ಈ ತೆರೆಮರೆಯ ಆಟ???
ಸೋತು ಸೊರಗಿದೆ ಮನಸು ನಿನ್ನ ಈ ಆಟದಲಿ,
ಸಾವೊಂದೇ ಸುಖವೆನಿಸಿದೆ ನೀನಿಲ್ಲದ ಪ್ರತಿಘಳಿಗೆ....

Tuesday, July 9, 2013

ಚರಣದಾಸಿ...

ಮಾಸಿದವು ಆಸೆಗಳು ಮೋಸದಾಟದಲಿ,
ಮಸಿಯ ಬಳಿದಿರಿ ನೀವ್ ಮುಗ್ದ ಹೃದಯಕೆ||

ಹಸಿಯ ಜೀವಕೆ ಏಕೆ ಹುಸಿಯ ಉಣ ಬಡಿಸಿದಿರಿ?
ಹಸುವಿನಂತೆಯೇ ಇದ್ದು, ಕಸಿಯ ಮಡಿಲೊಳಗಿಟ್ಟು,
ಕಸಿದುಕೊಂಡಿರವಳ ನಗೆ ಉಸಿರು ನಿಲ್ಲುವವರೆಗೆ||

ಘಾಸಿಯರಿವಿಲ್ಲ ಹುಸಿ ಸಿರಿಯ ಮೋಸದರಸರಿಗೆ,
ನುಸಿಯ ಕೀಟಗಳಂತಾಕ್ರಮಿಸಿ,
ಗಸಿಯ ಮಾಡಿದಿರವಳ ಹೊಂಬಾಳ ಕಣವೆಲ್ಲವನ್ನು||

ಹೊಸಿಲ ದಾಟಿಸಿ ನೀವ್ ಬಸಿರ ಬಗೆವುದು ಸರಿಯೇ?
ದಾಸಿಯಂತೆಣಿಸಿದಿರಿ ಬಾಳ ಹಾದಿಯಲಿ,
ಮಸೆದಿರವಳಾಸೆಗಳ ಅಣು ಅಣುಗಳಾಗಿ||

ಹಸಿಮನದ ಹುಸಿಯರಿಯದ ಮಾನಸಿ,
ಕುಸಿದು ಇಳೆಗಿಳಿದಳು ಆ ಸೌಂದರ್ಯ ರಾಸಿ,
ನಿಸಿಯಲ್ಲೇ ಹುಸಿಯಾದಳು ಆಕೆ, ಚರಣದಾಸಿ...

Thursday, March 14, 2013

ಹನಿ...


ಮೊದಲ ಮಳೆಯ ಮೊದಲ ಹನಿಯೇ,
ಕೆನ್ನೆ ಮೇಲೆ ಕ್ಷಣವು ಹೊಳೆದು,
ಮನದ ಆಳಕೆ ಮೆಲ್ಲನಿಳಿದು,
ತೊದಲ ಪ್ರೀತಿಗೆ ಹುಟ್ಟು ನೀಡಿದೆಯಲ್ಲೇ,
ವಿವರಣೆಯನಾರು ಹೇಳ್ವರು ನನ್ನ ಪುಟ್ಟ ಮನಸಿಗೆ...

ಮನದೆ ಇಳಿದ ಮೊದಲ ಹನಿಯೇ,
ಮೊಳೆತ ಜೀವಕೆ ಉಸಿರ ನೀಡು,
ಉಸಿರಿಗೊಂದು ಹೆಸರ ಹೇಳು,
ಹೊಸ ಭಾವದ ಪಿಸು ಮಾತಿಗೆ,
ಸೋತಿರುವುದು ನನ್ನೆದೆಯು,
ಹೆಸರಿನ ಗಾಢಾರ್ಥ ಹೇಳು ನನ್ನ ಪುಟ್ಟ ಮನಸಿಗೆ...

ನಿನ್ನ ತುಟಿಯ ಜೇನ ಹನಿಯು,
ಸವಿಯುವಾಸೆ ಹಗಲಿರುಳು,
ಸೋತ ಎದೆಗೆ ಸ್ವಂತವಾಗಿ,
ಚಿಂತೆ-ಸಂತೆ ದೂರ ಮಾಡಿ,
ಅಂತರಾಳದೊಲವಿನಿಂದ,
ಮಧುವನದಲಿ ಮಧು ಉಣಿಸು ನನ್ನ ಪುಟ್ಟ ಮನಸಿಗೆ...

Sunday, December 23, 2012

ಸುಳಿ...


ಸುಳಿದಾಡದಿರು ಗೆಳತಿ ಎನ್ನೆದೆಯ ಅಂಗಳದಲಿ,
ಸುಳಿವು ನೀಡದೆಯೆ ಬಂದು ಸೇರಿದೆ ನನ್ನೊಳಗೆ,
ಸುಳಿಯೊಳಗೆ ಸಿಲುಕಿಸಿಯೇಕೆ ದೂರ ಸರಿದೆ???

ಸೆಳೆವೆ ಕಣ್ಣುಗಳೆರಡು ಆ ನಿನ್ನ ಮೊಗದಲಿ,
ಹೊಳೆವ ಕಣ್-ಕಾಂತಿಯನೇನೆಂದು ಬಣ್ಣಿಸಲಿ,
ಮಳೆ, ಮಿಂಚು ಸಿಡಿಲುಗಳೆಲ್ಲ ಆ ಕಣ್ಣುಗಳಂಚಿನಲಿ,
ಇಳೆಗಿಳಿದು ಪ್ರೀತಿಸಿದೆ ಆ ಜೋಡಿ ಕಂಗಳಿಗಾಗಿ,
ಸುಳಿಯೊಳಗೆ ಸಿಲುಕಿಸಿಯೇಕೆ ದೂರ ಸರಿದೆ????

ಹಲವಾರು ದಿನರಾತ್ರಿಗಳ ಕನಸಿನಲಿ,
ಒಲವ ಪ್ರತಿಮೆಯನಿಟ್ಟು ಮನದ ಗುಡಿಯಲಿ,
ನಲಿವ ದುಂಡು ಮಲ್ಲಿಗೆಯ ಹೂಗಳಲಿ,
ಅರ್ಚಿಸಿ ಪೂಜಿಸಿದೆ ಗೆಳತಿ ನಿನ್ನ ಪ್ರತಿಮೆಯನು,
ಸುಳಿಯೊಳಗೆ ಸಿಲುಕಿಸಿಯೇಕೆ ದೂರ ಸರಿದೆ????

Thursday, November 1, 2012

ಕರುನಾಡು...


ಕಟುವಾದ ಕಲ್ಲಿನ ಕಂಬದಲು,
ಹಿತವಾದ ನಾದ ಹೊಮ್ಮುವುದು
ನಮ್ಮ ಕರುನಾಡಿನಲಿ....

ಬೆಟ್ಟ-ಗುಡ್ಡಗಳೆ ಅಡಗಿರಲು
ಸಹ್ಯಾದ್ರಿಯೊಡಲಿನಲಿ, ಹಸಿರೆ ಉಸಿರಾಗಿದೆ
ನಮ್ಮ ಕರುನಾಡಿನಲಿ....

ಕಾವ ತಡೆದರು ತಾಯಿ ಕಾವೇರಿ,
ಬೇಡಿದ ಭಟ್ಟಂಗಿಗಳಿಗೆಲ್ಲಾ ನೀರುಣಿಸುವಳು
ನಮ್ಮ ಕರುನಾಡಿನಲಿ...

ಸುಡು ಬಿಸಿಲೊಳು ಬೆಂದರು ನಮ್ಮ ಜನ,
ಬರುವ ಬೇವರ್ಸಿಗಳಿಗೆ ಅನ್ನ-ಆಶ್ರಯವ ಕೊಡುವರು
ನಮ್ಮ ಕರುನಾಡಿನಲಿ...

ಕಂಪು ಕನ್ನಡ ಗಾಳಿ ಉಸಿರೊಳಗೆ ಬೆರೆತಿರಲು,
ಕರುನಾಡೇ ನನ್ನ ನೆಲೆ, ಕಾವೇರಿ ತಾಯಿ,
ಕನ್ನಡವೇ ತಾಯ್ನುಡಿಯು,  ಕನ್ನಡತಿ ಎನ್ನೊಡತಿ,
ಮರೆತು ನಡೆದರೆ ನಾನು, ಮಸಣದಲಿ
ಮಸಿಯಾಗಿಸು ನನ್ನ, ತಾಯೆ ಕನ್ನಡಾಂಬೆ...

Wednesday, October 17, 2012

ಕನ್ನಡತಿ....


ಕರುಣದಲಿ ನೋಡೆ ಕಮಲನಯನೆ,
ಕರುನಾಡ ಕನ್ನಡ ಕುವರ ನಾನಿರುವೆ,
ಹೊರನಾಡ ಹೊಲಸು ಹಂದಿಗಳೇಕೆ ನಿನಗೆ,
ಚರಣದಾಸಿಯಾಗಬೇಕಿಲ್ಲ ನನಗೆ, ಹರುಷದಿಂದಲಿ ಪ್ರೀತಿಯ
ಹೂರಣವ ಉಣಿಸಿದರೆ ಸಾಕು ಮುದ್ದು ಮನಕೆ...

ಬೆಳ್ಳನೆಯದೆಲ್ಲಾ ಎಂದಿಗೂ ಹಾಲಲ್ಲ.
ಬೆಳ್ಳಗೇ ಬೆಳಗುವುದು ತಿಳಿಯ ಸುಣ್ಣದ ನೀರು,
ಬೆಳ್ಳಿ ಬೆಳಕಿನ ಚಂದ್ರ ಕಡುಗತ್ತಲಲೇ
ಹೊಳೆಯುವನು, ಹಾಲ ಶರಧಿಯಲಿ ಅದು ಬರಿಯ ಬಿಂಬ,
ಬೆಣ್ಣೆ ಸುಣ್ಣದ ಅಂತರ ಅರಿತರೆ ಸಾಕು ಮುದ್ದು ಮನಕೆ...

ಕಡುಕಪ್ಪು ಬಣ್ಣವೇ ಕಠಿಣ ವಜ್ರದ್ದು,
ಕಡೆದು ತೀಡಿದಮೇಲೆ ಆಳದಲಿ ಸಿಗುವುದು,
ಕಡೆಗಣಿಸದಿರು ಕಪ್ಪೆಂದು ನನ್ನ,
ಕಡೆಗಳಿಯವರೆಗೂ ಕೊಡೆಯಡಿಯಲಿ ನಿನ್ನ
ಕೈಹಿಡಿದು ನಡೆಸುವೆ ಓ ಕನ್ನಡದ ಹೆಣ್ಣೇ,
ಕನ್ನಡವೇ ನನ್ನುಸಿರು ಕರುನಾಡು ಕಲ್ಪತರು,
ಇಚ್ಛೆಯಿಂದಲಿ ಸ್ವಚ್ಚ ಕನ್ನಡತಿ ನೀನಾದರೆ ಸಾಕು ಮುದ್ದು ಮನಕೆ...